ಮಹಾಕವಿ ಕಾಳಿದಾಸನಿಗೆ ನಮನ ನಮೋ ಎಂಬೆ ಕವಿ ಗುರುವೆ ತಣಿಸಿತೋ, ಅಮರದೂತ ಮೇಘಾ ! ನಿನ್ನ ಇನಿಯಳಂತೆಯೇ ನನ್ನನೂ, ದಿವ್ಯಕಾವ್ಯದೋಘಾ ! ಇಂದ್ರ ಮಾಯೆಯನು, ಭಾವಛಾಯೆಯನು ನೂರು ಕಡೆಗೆ ಚೆಲ್ಲಿ ಅಮೃತಗರೆವುದಿದು ರಸಿಕ ಹೃದಯದಲಿ, ದಿಗ್ದಿಗಂತದಲ್ಲಿ . ಅಂಬಿಕಾತನಯದತ್ತರ ಕನ್ನಡ ಮೇಘದೂತ ಪೂರ್ವ ಮೇಘ "ಕಾಮಸ್ತದಗ್ರೆ ಸಮವರ್ತತಾಧಿ । ಮನಸೋ ರೇತಃ ಪ್ರಥಮಂ ಯದಾಸೀತ್ । ಸತೋಬಂಧಮಸತಿ ನಿರವಿಂದನ್ ಹೃದಿ ಪ್ರತೀಷ್ಯಾ ಕವಯೋ ಮನೀಷಾ ॥" ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೧೧ ಒಬ್ಬ ಯಕ್ಷ ತನ್ನೊಡೆಯನಿಂದ ನಲ್ಲೆಯನು ಅಗಲಿ ಬೆಂದು ಶಪಿತ ವರುಷವನು ಕಳೆಯಲಾಗದೇ ಮಹಿಮೆ ಕಳೆದುಕೊಂಡು ॥ ಜನಕತನಯೆ ಮಿಂದುದಕಗಳಲಿ ತಣ್ನೆಳಲ ಅಂಗಳಲ್ಲಿ ವಸತಿ ನಿಂದನೋ ರಾಮಗಿರಿಯ ಪುಣ್ಯಾಶ್ರಮಂಗಳಲ್ಲಿ ॥ ೧ ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು॥ ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ ॥ ೨ ಮೋಡ ನೋಡಿ ಮನಸಾಗಿ ನಿಂತನೋ ಹೇಗೊ ಏನೊ ಕಂಡು ರಾಜರಾಜನನುಚರನು ಇದ್ದ ಕಣ್ಣೀರ ನುಂಗಿಕೊಂಡು ಮೋಡ ಕಂಡೊಡನೆ ಬೇರೆ ಬಗೆಯಹುದು ಸುಖಿಗು ಎಂತೊ ಏಕೊ ಕೊರಳ-ಗೆಳತಿ ದೂರುಳಿದ ಮೇಲೆ ಆ ಗತಿಯ ಹೇಳಲೇಕೋ ॥ ೩ ಬಂತು ಶ್ರಾವಣಾ, ಎಂತು ಬದುಕುವಳೋ ಮಡದಿ ಜೀವ ಉಳಿಸಿ ಮೋಡದೊಡನೆ ತನ್ನೊಳಿತಿನೊಸಗೆಯನು ಅಂತೆ ಕಳಿಸಲೆಳಸಿ॥ ಬೆಟ್ಟ-ಮಲ್ಲಿಗೆಯ ಹೊಚ್ಚ ಹೂವಿನೊಡ ಕಾಲನೀರ ನೀಡಿ ಇದಿರುಗೊಂಡು ಬರಮಾಡಿಕೊಂಡ ಒಲಿದೊಲಿವ ಮಾತನಾಡಿ ॥ ೪ ಗಾಳಿ-ನೀರು-ಉಗಿ-ಬೆಂಕಿಗೂಡಿ ಆಗಿರುವ ಮೇಘವೆತ್ತ ಎತ್ತ ಮಾತುಗಳು ? ಮೋಡ ಜೀವವೇ ? ಏನೋ ಎತ್ತೊ ಚಿತ್ತ ॥ ಭೇದವೆಣಿಸದೆಯೆ ಕಂಡ ಮೋಡವನೆ ಬೇಡಿಕೊಂಡ ತಾನು ಜಡವೊ ಚೇತನವೊ ಬಯಕೆ ಮರುಳರಿಗೆ ಯಾವ ವಸ್ತುವೇನು ?॥ ೫ ಪುಷ್ಕರಾದಿ ಜಗ ಬಲ್ಲ ವಂಶದವನಲ್ಲೆ, ಬಲ್ಲೆ ನಾನು ಕಾಮರೂಪಿಯೇ ಪ್ರಕೃತಿಪುರಷನೋ ಇಂದ್ರನಲ್ಲಿ ನೀನು ॥ ದೈವ-ಬಂಧು ನೀ ಬೇಡೆ ಕೆಡುಕರಲಿ ; ಬಯಕೆಗೂಡಿಯೇನು ? ಲೇಸು ಒಳ್ಳ್ಯವರ ಬೇಡಿಕೊಂಬುದೇ ವ್ಯರ್ಥವಾದರೂನು ॥ ೬ ನೀರೆ ಕಾದವಗೆ ಶರಣು ಅಲ್ಲವೇ ? ಇನಿಯಳೆಡೆಗೆ ಓತು ಒಯ್ಯೋ, ಧನಪತಿಯ ಮುನಿಸಿಗೀಡಾಗಿ ಅಗಲಿದವನ ಮಾತು ॥ ಯಕ್ಷರಾಜನಾ ರಾಜಧಾನಿ ಅಲಕೆಗೆಯೆ ಹೋಗು ನೀನು ಅಲ್ಲಿ ಶಿವನ ಮುಡಿಚಂದ್ರ ತೊಳೆವ ಮಹಮನೆಯ ಮಾಟವೇನು? ॥ ೭ ಗಾಳಿ ಬಟ್ಟೆಯಲಿ ಬರವ ಕಂಡು ಕುರುಳೋಳಿ ಓರೆಮಾಡಿ ದೂರ ಹೋದವರ ಹೆಣ್ಣು ನೋಡುವವು ನಿನ್ನನಾಸೆಗೂಡಿ ॥ ನೀನೆ ಬರಲು ಅವನಾವನಿರುವನೋ ನಲ್ಲೆ ಬಿಟ್ಟುಗೊಟ್ಟು, ಬೇರೆಯವರ ಆಳಾಗಿ ಇರುವ ನಮ್ಮಂಥ ಜನರ ಬಿಟ್ಟು ॥ ೮ ಗಾಳಿ ಬೀಸುವದು ನಿನ್ನ ನೂಕಿಸುತ ಮಂದ ಮಂದವಾಗಿ ಚೂಚು ಚಾಚಿ ಚಾದಗೆಯು, ಎಡಕೆ ಕೂಗುವದು ಚೆಂದವಾಗಿ ॥ ಬೆದೆಯ ನೆನೆದು ಬೆಳ್ಳಕ್ಕಿ ಬರುವವೋ ಸಾಲು ಸಾಲುಗೊಂಡು ಬೆನ್ನಗಟ್ಟುವವು ಕಣ್ಗೆ ಸೊಬಗ ನೀ ತಂದೆ ಎಂದುಕೊಂಡು ॥ ೯ ಎಷ್ಟು ದಿವಸ ಇನ್ನುಳಿದುವೆಂದು ದಿನದಿನವು ಲೆಕ್ಕವಾಗಿ ಜೀವ ಹಿಡಿದುಕೊಂಡಿರುವ ನಿನ್ನ ಅತ್ತಿಗೆಯ ನೋಡು ಹೋಗಿ ॥ ನಾರಿ ಹೃದಯದಲಿ ನಾರಿನೆಳೆಯುವೊಲು ಇಹುದು ಆಸೆಯೊಂದು ಅಗಲಿದಾಗಲೇ ಕಳಚಿ ಬೀಳುವೆದೆ-ಹೂವ ಬಿಗಿದುಕೊಂಡು ॥ ೧೦ ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿ ಅಣಬೆತಾಳಿ, ಕಿವಿಗೆ ಸವಿಯೆನಿಪ ಮೊಳಗ ಕೇಳಿ ಮಾನಸಕೆ ಬಂತು ದಾಳಿ ॥ ತುಂಡು ತಾವರೆಯ ಬುತ್ತಿ ಕಟ್ಟಿ ಕೈಲಾಸಕಾಗಿ ಸಾಗಿ ಬಾನ ಬಯಲಿನಲಿ ಕೊನೆಗು ಬರುವವರಸಂಚೆ ಜೋಡಿಯಾಗಿ ॥ ೧೧ 'ಹೋಗಿ ಬರಲೊ' ಎಂದಪ್ಪಿ ಕೇಳು ಈ ಮುದ್ದು ಗೆಳೆಯನನ್ನು ರಾಮಪಾದಗಳು ಮುದ್ದಿ ಮುದ್ರಿಸಿದವಿದರ ಮಗ್ಗುಲನ್ನು ॥ ಕಾಲ ಕಾಲಕೂ ನಿನ್ನ ಕಂಡು ಇದು ಮೈಯನರಳಿಸುವದು ಅಗಲಿ ಬಲು ದಿನಕೆ ಬಂದೆ ಎಂದು ಬಿಸಿ ನೀರನುರುಳಿಸುವದು ॥ ೧೨ ಹಾದಿ ಹೇಳುವೆನು ಕೇಳು ನಿನಗೆ ಅನುಕೂಲ ಪಯಣಕಾಗಿ ಬಳಿಕ ನನ್ನ ಸಂದೇಶ ಕಿವಿಗೆ ಪರಿಣಮಿಸಲಮೃತವಾಗಿ ॥ ತೊಳಲಿ ಬಳಲಿ ಗಿರಿ ಶಿಖರಗಳಲಿ ಕಾಲಿಟ್ಟು ಸಾಗುವಾಗ ದಣಿವ ತವಿಸು, ನೀರಿನಿಸೆ ಸವಿಸಿ ಆ ಹಳ್ಳ-ಕೊಳ್ಳದಾಗ ॥ ೧೩ ಗಿರಿಯ ಶೃಂಗವೇ ಹರಿದು ಹೋಗುವದೋ ಏನೋ ಎಂಬುದಾಗಿ ಗಾಳಿ ಬೀಸುತಿರೆ ಸಿದ್ಧ-ಮುಗ್ಧೆಯರು ನೋಡೆ ಚಕಿತರಾಗಿ ಹಾರು ಬಡಗಣಕೆ ನೀರ-ನಿಚುಲನೆಡೆಯಿಂದ ಮೇಲೆ ಅತ್ತ ಹಾದಿಯಲ್ಲಿ ದಿಙ್ನಾಗ ಬೀಸಿದಾ ಕರವ ತಪ್ಪಿಸುತ್ತ ॥ ೧೪ ಏಳು ರತುನಗಳ ಮೇಳಗೂಡಿ ಕಂಗೊಳಿಸುವಂತೆ ಮುಂದು ಹುತ್ತದಿಂದ ಎದ್ದಿರುವದಲ್ಲಿ ಅಗೊ ಇಂದ್ರಧನುವದೊಂದು ॥ ನಿನ್ನ ಕಪ್ಪು ಮೈಗದರ ಒಪ್ಪ ಬರಲೇನು ಕಾಂತಿ ಬಂತು ಗೋಪವೇಷದಾ ವಿಷ್ಣು, ಗರಿಯ ಧರಿಸಿರಲು ಕಾಣುವಂತು ॥ ೧೫ ಕುಡಿದು ಬಿಡುವರೋ ಕಣ್ಣ ಕುಡಿಗಳಲಿ ಬೆಳೆಗೆ ಬಂಧು ಎಂದು ಹುಬ್ಬ ಹಾರಿಸುವ ಬಿಂಕವಿಲ್ಲದಾ ಹಳ್ಳಿ ಹೆಂಗಳಂದು ॥ ಅದೇ ಹರಗಿ ನೆಲಗಂಪ ಹರಹುವಾ ಹೊಲದ ಮಾಳವೇರಿ ನೀರ ತಳಿಸಿ ಹಗುರಾಗಿ, ಉತ್ತರಕೆ ಮತ್ತೆ ಹೋಗು ಸಾರಿ ॥ ೧೬ ಮಾವುಮಲೆಯ ಕಡು ಕಾಡಬೇಗೆ ತವಿಸಿದ್ದೆ ಮಳೆಯ ಸುರಿಸಿ ತಣಿಸದಿರುವದೇ ದಾರಿದಣಿವಿಕೆಯ, ಅದುವು ಕೆಳೆಯ ಸ್ಮರಿಸಿ ॥ ಎಂಥ ಕಿರುಕುಳನು ಮೊದಲು ಮಾಡಿದುಪಕಾರ ಮರೆಯಬಹುದೇ ಎಂದಮೇಲೆ ಅವನಂಥ ದೊಡ್ಡವನು ವಿಮುಖನಾಗಲಹುದೇ ॥ ೧೭ ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ ॥ ಅಮರ ಮಿಥುನಗಳ ಪ್ರಣಯ-ದೃಷ್ಟಿ ಅರಳರಳುವಂತೆ ಆಗೆ ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ ॥ ೧೮ ಕಾಡ ಹುಡುಗಿಯರ ಆಟ ನಡೆದ ಎಲೆಮಾಡಗಳಲಿ ತಂಗಿ ನೀರ ಸುರಿಸಿ ತುಸು ಮುಂದುವರಿಸು ಆ ದಾರಿ ದಾಟಿ ಹಿಂಗಿ ॥ ವಿಂಧ್ಯದಡಿಗೆ ಕಡುಬಂಡೆಯೊಡೆದು ಹರಿದಿರುವ ರೇವೆ ನೋಡು ಚಿತ್ರ ಚಿತ್ರ ಸಿಂಗಾರವಾದ ಮದ್ದಾನೆ ಹಣೆಗೆ ಜೋಡು॥ ೧೯ ॥ ಅಲ್ಲಿ ಕಾಡು ಮದ್ದಾನೆಮಿಂದ ಬಹು ಗಂಧ ನೀರ ಕುಡಿದು ಮುಂದೆ ಹೋಗು, ನೇರಿಳೆಯ ತಡೆವಡೆದು ನಿನ್ನ ದಾರಿ ಹಿಡಿದು ॥ ತುಂಬು ಮೋಡವೆ, ಗಾಳಿ ಈಡೆ ? ನಿನಗಾರು ತೂಗಬಹುದು ? ಬರಿದು ಆಗಿ ಹಗುರಾದ : ತುಂಬಿದವ ಮಾನವಂತನಹುದು ॥ ೨೦ ಹಸಿರು ಹಳದಿ ಕಪ್ಪಾದ ಮುಗುಳ ಕಡವಾಲಗಳನು ನೋಡಿ ನೀರ ನೆರೆಯ ಕಲ್ಬಾಳೆ ತಲೆಯನೆತ್ತಿದವು ಹೂವು ಮೂಡಿ ॥ ಮೆಯ್ದು ಜಿಗಿದು ಅಡವಿಯಲಿ, ನೆಲದ ಕಡುಗಂಪ ಮೂಸಿ ಹಿಳಿದು ಸಾರಂಗ ಜಾತಿ ಸುತ್ತಾಡತಾವ ಇಳಿಮಳೆಯ ಹಾದಿ ತುಳಿದು ॥ ೨೧ ಎಷ್ಟು ಬೇಗ ನೀ ಹೋಗಬೇಕು ನನಗಾಗಿ ಎನಿಸಿ ಏನು ? ಬೆಟ್ಟ ಬೆಟ್ಟ ಬಿಟ್ಟಿರುವ ಮಲ್ಲಿಗೆಯ ಜೊತೆಗೆ ಉಳಿವೆ ನೀನು ॥ ಇಷ್ಟು ತಿಳಿಯೆನೇ ? ಕಣ್ಣು-ತುಂಬಿ ಕುಡಿಗಣ್ಣ ಚಾಚಿ ಕೇಕಿ ಕೇಕೆ ಹಾಕುತಲೆ ಹೇಗೊ ಹೊರಡುವೀ ಹಿಂದುಮೆಟ್ಟ ನೂಕಿ ॥ ೨೨ ಮುಳ್ಳುಮೊನೆಯ ಕೇದಿಗೆಯ ಹಳದಿ ನೆರಳುಳ್ಳ ತೋಟವಳ್ಳಿ ಊರ ತಿರಿವ ಕಾಕಗಳ ಬಸದಿಗಳ ಹಾದಿಗಿಡದ ಹಳ್ಳಿ । ಮಳೆಯ ಮಾಸದಲಿ ಜಂಬು-ನೇರಿಳೆಯೆ ತುಂಬಿ ಬನಗಳಲ್ಲಿ ಕೆಲವೆ ದಿವಸ ಆ ಹಂಸಗಳಿಗೆ ನೆಲೆ ಆ ದಶಾರ್ಣದಲ್ಲಿ ॥ ೨೩ ದಿಕ್ಕು ದಿಕ್ಕಿನಲ್ಲಿ ವಿದಿಶೆಯೆಂದು ಹೆಸರಾದ ರಾಜಧಾನಿ ಅಲ್ಲಿ ಹೋಗಿ ಬಯಬಯಸಿದಂಥ ಹಣ್ತಿನ್ನು ಕಾಮುಕಾ, ನೀ ॥ ಹುಬ್ಬು ಮುರಿದ ಬೆಡಗುಳ್ಳ ಮುಖಕೆ ಸರಿ ನೇತ್ರವತಿಯ ನೀರು ಅವಳ ಬಳಿಗೆ ಗುಡುಗುಡಿಸಿ ಸೊಬಗ, ನೀನವಳ ಸವಿಯ ಹೀರು ॥ ೨೪ ನೀನು ಮುಟ್ಟೆ ಮೈ ಜುಮ್ಮು ತಟ್ಟಿತೋ ಅಗಲ ಹೂವ ತೆರೆದು ನೀಚಗಿರಿಯ ಕಡವಾಲ ಇಹವು ಹೋಗಲ್ಲಿ ಸುಂದು ಮರೆದು ॥ ಅಲ್ಲಿ ನಲ್ಲ-ಬೆಲೆವೆಣ್ಣ - ಕೂಟ ಹೊಸಗಂಪನುಗುಳುತಿಹವು ನಾಗರಿಕರ ತಾರುಣ್ಯಮದವ ಕಲ್ಮಾಡ ಹೊಗಳುತಿಹವು ॥ ೨೫ ಅಲ್ಲಿ ತಂಗಿ ಮುಂಬರಿಯೊ ಕಾಡ-ಹೊಳೆ-ದಂಡೆ-ತೋಟದಲ್ಲಿ ಬಳ್ಳಿ ಬಳ್ಳಿ ಹೂಜಲ್ಲಿಯಲ್ಲಿ ಮುಂಬನಿಯು ತುಳುಕಿ ಚೆಲ್ಲಿ ॥ ಗಲ್ಲ ಬೆಮರೆ, ಕಿವಿಕಮಲ ಕಮರೆ, ಪಾಮರರ ಅಮರಿಯರಿಗೆ ನಿನ್ನ ನೆರಳ ಕ್ಷಣವಿತ್ತು, ರಮಿಸು ಹೂದೋಟಗಿತ್ತಿಯರಿಗೆ ॥ ೨೬ ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು ? ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು ॥ ಆs ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು ಅವರ ಕಣ್ಣ-ಕುಡಿ-ಲಲ್ಲೆಯೊಲ್ಲೆಯಾ ? ವ್ಯರ್ಥ ಇದ್ದು ಕಣ್ಣು ॥ ೨೭ ನಿನ್ನ ಕಂಡು ನಿರ್ವಿಂಧ್ಯೆ ಮುಂದೆ, ತೆರೆ ತೆರೆದು, ಅಂಚೆ ಉಲಿಸಿ ಗೆಜ್ಜೆ ಪಟ್ಟಿ ಗಿಲುಕೆನಿಸಿ, ಎಡವಿ, ಸುಳಿನಾಭಿ ತೋರಿ ನಲಿಸಿ ಹಾದಿಯಲ್ಲಿ ಬರೆ, ಆಗು ಸಮರಸಿಯು ಕೇಳಬೇಡ ಬದಲು ಹೆಣ್ಣಿನೊಲವಿನಲಿ ಮಳ್ಳ ಮುರಕವೇ ಮಾತಿಗಿಂತ ಮೊದಲು ॥ ೨೮ ಹೆಳಲು ಇಳಿದು ಒಕ್ಕಾಲು ಉಳಿದು, ನಡೆದಿಹಳು ತೆಳ್ಳಗಾಗಿ ದಡದ ಮರದ ಒಣ ಎಲೆಗಳುದುರಿ ತನ್ನುದರ ಬೆಳ್ಳಗಾಗಿ ॥ ನೀನು ಸೊಬಗ, ನಿನ್ನಿಂದ ಅಗಲಿ ತಾ ಸೊರಗಿ ಸಣ್ಣಗಹಳು ದೈವದಿಂದ ನಿನ್ನನ್ನು ಸೇರಿ ಮೈದುಂಬಿಕೊಳ್ಳಬಹಳು ॥ ೨೯ ಬಂದವಂತಿನಾಡಿನಲಿ ಉದಯನನ ಕಥೆಯ ಬಲ್ಲರೆಲ್ಲಿ ಅಲ್ಲಿ ಸಿರಿಯು ಹರಹಿರುವ ಪೂರ್ವಪುರವಿಹುದು ನಿಲ್ಲು ಅಲ್ಲಿ ॥ ಪುಣ್ಯವಂತರೋ, ಪುಣ್ಯತೀರಲಿರೆ ಸ್ವಲ್ಪೆ ಉಳಿಯಲಾಗ ಸ್ವರ್ಗದೊಂದು ತುಣುಕನ್ನೆ ತಂದರೋ ಇಳೆಗೆ ಇಳಿಯುವಾಗ ॥ ೩೦ ಮತ್ತ ಹಂಸಗಳ ಮತ್ತಿನುಲಿವನೇ ಮತ್ತೆ ಎಳೆದು ಬಳಸಿ ಬೆಳಗಿನಲ್ಲಿ ಅರಳಿರುವ ತಾವರೆಯ ಕಂಪಕೆಳೆಯ ಬೆಳೆಸಿ ॥ ಸುಸಿಲ ನಲಸಿಕೆಯ ಕಳೆವುದಲ್ಲಿ ಶಿಪ್ರಾವಾತವಂತೆ ಮಧುರವಾಗಿಯೇ ಚದುರನಾಡುತಿಹ ಬಲ್ಲ ನಲ್ಲನಂತೆ॥ ೩೧ ಕೇಶ-ಧೂಪ ಎಳೆದಾವು ನಿನ್ನ, ಬೆಳಕಂಡಿಯಿಂದ ಹರಿದು ॥ ನೀಲಿಬಣ್ಣ ನೀನಣ್ಣ, ನವಿಲು ನಲಿದಾವು ಕುಣಿದು ಕರೆದು ॥ ಅಲಸುಗಳೆಯೊ, ಆ ಕಂಪು ಮಾಡಗಳಲೇನು ಇಂದ್ರಮೋಡಿ ನಡೆದು ನೀರೆಯರು ಬಣ್ಣ ಬಳೆದು ಅಂಗಾಲ ಪದ್ಮ ಮೂಡಿ ॥ ೩೨ ರುದ್ರ-ಗಣವು ಬಾಗೀತು ನಿನಗೆ, ಹೇ ಕೊರಳಗರಳ ವರಣಾ ಕಾಣು ಹೋಗು ಶ್ರಿ ಚಂಡಿಪತಿಯ ಮಾಂಕಾಳ ಪುಣ್ಯ ಚರಣಾ ॥ ಅವನ ತೋಟದಲಿ ಗಾಳಿ ತೀಡುವದು ಗಂಧವತಿಯನೆರೆದು ಕಮಲಗಂಧಿಯರು ಮಿಂದ ನೀರಿಗರವಿಂದಗಂಧ ಬೆರೆದು ॥ ೩೩ ನಿನ್ನ ಕಣ್ಣ ಹೊಲದಾಚೆಗಾಗಿ ರವಿ ತಣ್ಣಗಿರುವವರೆಗೂ ಸುಳ್ಳೆಪಳ್ಳೆ ತರಹರಿಸಬೇಡ, ಇರು ಅಲ್ಲೆ, ಬೈಗ ಮರೆಗೂ ॥ ದೇವ-ಸೇವೆ ನಡೆದಾಗ ಸಂಜೆ ದುಂದುಭಿಯ ಮೊಳಗು ನೀನು ಪೂಜ್ಯವಸ್ತುವಿನ ಪೂಜೆಗೊದಗದಾ ನಾದವಿದ್ದು ಏನು ? ॥ ೩೪ ದೇವದಾಸಿಯರು ಹೆಜ್ಜೆ ಹಾಕಿ, ನಡುಗೆಜ್ಜೆ ಕುಣಿಸಿ ನವುರಿ, ಬಳ್ಳಿತೋಳು ಬಳುಕಾಡೆ ಬೀಸುವರು ರನ್ನ ಗಾವ-ಚವರಿ ॥ ನಿನ್ನ ಮೊದಲ ಹನಿ ಉಗುರು-ತಾಣ ತಂಗೊಳಿಸೆ ಎದೆಯ ತಾಗಿ ನೋಟ ಬೀರುವರು ನಿನ್ನ ಕಡೆಗೆ ತುಂತುಂಬಿ ಮಾಲೆಯಾಗಿ ॥ ೩೫ ಬಳಿಕ ಬೆಳೆದ ಉದ್ದುದ್ದ ಟೊಂಗೆ ಮರದುದಿಗಳಲ್ಲಿ ಒರಗಿ ಸಂಜೆಗೆಂಪು-ದಾಸಾಳಬಣ್ಣದವನಾಗಿ ನೀನು ಮೆರುಗಿ ॥ ಶಿವನು ಕುಣಿಯಲಿರೆ ಅವನ ತೊಡೆಯ ಹಸಿ ತೊವಲಿನಿಂದ ಮುಚ್ಚಿ ಮಾಡು ಅವನ ಸತಿ ನೋಡುವಂತೆ ದೃಢ ಭಕುತಿಯಿಂದ ಮೆಚ್ಚಿ ॥ ೩೬ ರಮಣರತ್ತ ಉಜ್ಜಯನಿ ರಮಣಿಯರು ಹೊರಟ ರಾತ್ರಿಯಲ್ಲಿ ರಾಜಬೀದಿ ಕಗ್ಗತ್ತಲಾಗಿ ಕಂಗೆಡಿಸೆ, ಮಿಂಚ ಚೆಲ್ಲಿ ॥ ದಾರಿದೋರು ಹೊಂಬೆಳಕ ಮಾಡಿ ಮಳೆ ಗುಡುಗು ಬೇಡೊ ಮೇಘಾ ಮೊದಲೆ ಹೆದರಿದವರವರೊ, ಕಳುವಿನಲಿ ಹೋಗಬೇಕು ಬೇಗಾ ॥ ೩೭ ಪಾರಿವಾಳ ಹಲವಾರು ಮಲಗಿದೇಳನೆಯ ಮಾಡದೊಳಗೆ ಮಿಂಚು ಮಡದಿ ಬಳಲಿರುವಳೇನೊ ? ಮಲಗಲ್ಲಿ ಬೆಳ್ಳಬೆಳಗೆ । ಮುಂದೆ ದೂಡುವದು ನಿನ್ನನುದಯದಲಿ ನಮ್ಮ ನಿಮ್ಮ ನಂಟೇ ಗೆಳೆಯಗಾಗಿ ಕೈಕೊಂಡ ಕೆಲಸವನು ನಡುವೆ ಬಿಡುವರುಂಟೇ ॥ ೩೮ ಒಂಟಿಯಾಗಿ ಇರುಳುದ್ದ ಕಳೆದ ಸತಿಗಾಗಿ ರವಿಯು ಬಹನು ಸಾವಿರಾರು ಕರ ಚಾಚಿ ಕಮಲೆಯರ ಕಣ್ಣನೊರಿಸಲಿಹನು ॥ ತನ್ನ ಹೆಂಡಿರನು ತಾನೆ ತವಿಸದಿನ್ನಾರು ಶಮಿಸಲಹುದು ಅಡ್ಡ ನೀನು ಇರಬೇಡ ರವಿಗೆ ; ಅವ ಕೆಂಡವಾಗಬಹುದು ॥ ೩೯ ಹೆಸರಿನಂತೆ ಗಂಭೀರೆ ಧೀರೆ ತಿಳಿನೀರೆ ಜಲದೊಳವಳ ಸೇರಬಲ್ಲೆ ನೆರಳಾದರೇನು ? ಸರಿ, ನೀನು ನೀರನಿವಳ ॥ ಅವಳು ನೋಡುವಳು ಚಪಲ ಮೀನ ಚಳಕುಮುದ ನೇತ್ರೆಯಾಗಿ ತಿರುಗಿ ನೋಡು ಇಹಳವಳು ನಿನ್ನ ಅನುರೂಪ ಕ್ಷೇತ್ರವಾಗಿ ॥ ೪೦ ಕೈಯ ಚಾಚಿ ತಡೆವಂತೆ ನಾಚಿ ನೀರ್ಬೆತ್ತ ಬಾಗಿ ಎಳೆದು ಹಿಡಿದರೇನವಳ ಮುಗಿಲ ಬಣ್ಣದಾ ಮಂಜುಸೀರೆ ಸೆಳೆದು ॥ ಒಯ್ಯೋ ನಿನ್ನ ಜೊತೆಗಿರಲಿ, ಮೇಘವೇ, ಪಯಣ ಬೆಳೆಸುವಾಗ ಉಂಡು ಒಮ್ಮೆ ಬಿಡಬಹುದದಾರು ಬರಿ ಬಚ್ಚ ಚೆಲುವು ಭೋಗ ॥ ೪೧ ನಿನ್ನ ಉಸಿರ ಹನಿ ಸೋಕಿ, ನೆಲದ ನರುಗಂಪು ಹೊಮ್ಮಿ ತಾಗಿ । ಬಂದ ಗಾಳಿ ಕುಡಿದಾನೆ ತಾನೆ ಹರಿ ಮೂಗೆ ಸೊಂಡಿಲಾಗಿ ॥ ಕಾಡ ಅತ್ತಿ ಹಣ್ಗೊಳಿಸುವಂಥ ತಂಗಾಳಿ ಇದಿರು ಬಂದು ದೇವಗಿರಿಯ ಸೇರಿಸುವದಣ್ಣ, 'ಬಿಜ ಮಾಡಿ ತಾವು' ಎಂದು ॥ ೪೨ ಈ ಗಿರಿಯ ಜೀವ, ಆ ಸ್ಕಂದದೇವ, ಅಭಿಷೇಕ ಮಾಡು ಬಾಗಿ ಹೂ ಮೋಡದಿಂದ ಹೂಮಳೆಯ ಸುರಿಸು ನೀ ಬಾನಗಂಗೆಯಾಗಿ ॥ ಸುರರಾಜ್ಯ ಸೈನ್ಯ ರಕ್ಷಣೆಗೆ ಬಂದ ಶಿವವೀರ್ಯದೊಂದು ಮೂರ್ತಿ ಅವ ಮಿಗಿಲು ಹಗಲಿಗೂ, ಉರಿಯ ಕಂದ, ಕಿರುಕುಳವೆ ಅಂಥ ಕೀರ್ತಿ॥ ೪೩ ಉದುರಿದ್ದ ನವಿಲಗರಿ ಮುತ್ತಿ ಎತ್ತಿ ಕಣ್ಗೊತ್ತಿ ಶಿವೆಯು ಕಿವಿಗೆ ನೈದಿಲೆಯ ಬಳಿಗೆ ಇರಿಸುವಳು ಅವಳು ಮಗನೊಂದು ಮುದ್ದು ಸವಿಗೆ ॥ ಶಿವಮೌಳಿ ಚಂದ್ರಕಳೆಗಿಂತ ಬೆಳ್ಳಗುಡಿಗಣ್ಣ ನವಿಲ ಕುಣಿಸು ಅಗೊ ನಿನ್ನ ಮೊಳಗು, ಆ ಗುಡ್ಡದೊಳಗು, ಸೊಲ್ಲಾಗುವಂತೆ ತಣಿಸು॥ ೪೪ ಹರಶರಗಳಲ್ಲಿ ಹುಟ್ಟಿದ್ದ ದೇವನಾ ಸೇವೆಯಾಗೆ ಲೀಲೆ ವರ ಸಿದ್ಧದ್ವಂದ್ವಗಳು ವೀಣೆಗೂಡಿ, ಮಳೆ-ಹಾದಿ ಬಿಟ್ಟ ಮೇಲೆ ॥ ಗೋಯಾಗದೊಂದು ಅನುರಾಗದಿಂದ ಬರುವಲ್ಲಿ ಬಾರೊ ಸುರಿಯೆ ಹಾತೊರೆವ ಚರ್ಮವತಿ ರಂತಿದೇವನಾ ಕೀರ್ತಿಯಂತೆ ಮೆರೆಯೆ ॥ ೪೫ ಕೃಷ್ಣವರ್ಣವನೆ ಕಳವು ಮಾಡಿದಾ ಮೋಡ ನೀನು ತಗ್ಗಿ ನದಿಯ ನೀರು ಕುಡಿವಾಗ ಕಾಣುವಿಯೊ, ಬಾನಿನಲ್ಲಿ ಹಿಗ್ಗಿ॥ ನೋಡಲಿರುವ ಆ ದೇವಜಾತಿಗಳ ಕಣ್ಗೆ ಜಾಲವಾಗಿ ಭೂಮಿ ತೊಟ್ಟ ಅಣಿಮುತ್ತು ಹಾರದಲ್ಲಿ ಇಂದ್ರನೀಲವಾಗಿ ॥ ೪೬ ಮುಂದೆ ದಶಪುರದ ಹೆಣ್ಣ ಹುಬ್ಬು ಕರೆಯುವದು ಲೋಲವಾಗಿ ಎವೆಗಳಾಟದಲಿ ನೋಟವೆಸೆಯುತಿರೆ ಕಪ್ಪು ನೀಲವಾಗಿ ॥ ಯಾರ ಕಣ್ಣು ಹೋಲುವವು ಮೊಲ್ಲೆಯೊಡನಾಡಿ-ತುಂಬಿಯನ್ನು ಅವರ ಕಣ್ಣ ಕುತುಕಕ್ಕೆ ನೀಡು ನಿನ್ನಾತ್ಮಬಿಂಬವನ್ನು ॥ ೪೭ ಬಾರೊ ದಾಟಿ ಬಹ್ಮಾಧಿವರ್ತವನು ನಿನ್ನ ಛಾಯೆ ಚೆಲ್ಲಿ ಎಲ್ಲಿ ಇಂದಿಗೂ ಹಿಂದಿನೆಲಬು ಆ ಕುರುಕ್ಷೇತ್ರದಲ್ಲಿ॥ ಅರಸುಗಿರಸುಗಳ ಚೆಂಡು ಕಳೆದ ಗಾಂಡೀವಧನ್ವ ಅಂದು ನೀನು ಕಮಲಗಳ ಸೆಳೆವ ಹಾಗೆ ಮಳೆ ಸೆಳಕಿನಿಂದ ಇಂದು ॥೪೮ - ಮಡದಿ ರೇವತಿಯ ಮುಖವು ಮೂಡಿದಾ ಕಳ್ಳುಹಾಲ ಕುಡಿದ ಕೃಷ್ಣನಣ್ಣನಾ ಸಮರ ತೊರೆದು ಒಲಿದಿವಳ ದಂಡೆ ಹಿಡಿದ ॥ ಕುಡಿಯೊ ನೀನು ಸರಸತಿಯ ನೀರ ಬಲರಾಮನನ್ನು ನಂಬಿ ಬಣ್ಣವಿರಲಿ ಕರಿ ; ಬೆಳ್ಳಗಾಗು ಒಳಗೆಲ್ಲ ಬೆಳಕು ತುಂಬಿ ॥ ೪೯ ಜನ್ಹು ಕನ್ಯೆ ತೊರೆದಿಳಿದಳಣ್ಣ ಕನಖಲದ ಮಲೆಯ ಬಳಿಗೆ ಸಗರ ಸಂತತಿಗೆ ಸ್ವರ್ಗದೊಂದು ಸೋಪಾನವಾಗಿ ಇಳೆಗೆ ॥ ಗೌರಿ ಮುರಿವಳಬ್ಬಬ್ಬ ಹುಬ್ಬ-ಎನೆ ನಕ್ಕು ನೊರೆಗಳಿಂದ ಜಗ್ಗುತಿಹಳು ಶಿವಜಡೆಯ ಚಂದ್ರಮಣಿ ಕೈಯ ತೆರೆಗಳಿಂದ ॥ ೫೦ ನೀನು ಬಾನಿನಲಿ ಕಾಲು ಸೋತು ಬರೆ, ಗಂಗೆ ಕುಡಿಯಲೆಂದು ಸ್ವರ್ಗದಾನೆಯೇ ಸೊಂಡೆ ಚಾಚಿದೊಲು ಕಾಂಬೆ ನೋಟವೊಂದು ॥ ಬೇರೆ ಕಾಣುವದು ನೋಟ, ನೀರಿನಲಿ ಛಾಯೆ ಮೂಡಿದಂತೆ ಗಂಗೆಯನ್ನೆ ಮತ್ತೊಂದು ಕಡೆಗೆ ಆ ಯಮುನೆ ಕೂಡಿದಂತೆ ॥ ೫೧ ಮಂಜು-ಬೆಟ್ಟ ಮುಡಿಯಟ್ಟದಲ್ಲಿ ಕಸ್ತೂರಿ ಮೆಟ್ಟಿನಲ್ಲಿ ಇಳೆಯ ತೊಳೆಯೆ, ಹೊಳೆಯಾಗಿ ಬರುವ ಸಿರಿಗಂಗೆ ಹುಟ್ಟಿನಲ್ಲಿ ॥ ದಾರಿದಣಿವಿಕೆಯ ಕಳೆಯೊ ನೀನು ಆ ಕೋಡಿನಲ್ಲಿ ಕುಂತು ಶಿವನ ನಂದಿ ಕೋಡೆತ್ತಿ ಒಗೆದ ಕರಿ ಮಣ್ಣ ಮುದ್ದೆಯಂತು ॥ ೫೨ ದೇವದಾರು ಮರ ತಾಕಲಾಡಿ, ದಾವಾಗ್ನಿ ಕಿಡಿಯ ಸೂಸೆ ಹೊತ್ತಿ ಬಾಲ, ಸುತ್ತಾಡಿ ಚಮರಿಮೃಗವೆತ್ತಿ ಬಾಲ ಬೀಸೆ ॥ ಕುತ್ತದಲ್ಲಿ ಇರೆ ಸುರಿಸು ನೀರು ; ಉರಿ ಈಡೆ ನಿನ್ನ ಮಳೆಗೆ ? ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ ॥ ೫೩ ಸಿಟ್ಟಿನಿಂದ ಸಿಡಿದೆದ್ದು ಶರಭ ಬರೆ ತಾಗಿ, ಕಂಡು ಮಿದುವು. ಮೂಳೆಗಳನು ಮುರಿಕೊಳ್ಳಲೆಂದು ಹವಣಿಸಿದ ಹಾಗೆ ಅದುವು ॥ ಆಲಿಕಲ್ಲಿನಿಂದಿಟ್ಟು ಕುಟ್ಟು , ಅದರಂಥ ಮೂಢರೊಳರೇ ? ಮುಗಿಲಿಗೆಂದು ಕೈ ಹಾಕಿ ಹಾರಿದರೆ ಕಾಲು ಮುರಿದು ಕೊಳರೇ ? ॥ ೫೪ - ಅಲ್ಲೆ ಕಲ್ಲಿನಲಿ ಶಿವನ ಪಾದ ಮೂಡಿಹವು ಸಿದ್ಧರದನು ಪೂಜಿಸುವರು ಎಂದೆಂದು, ಹೋಗು ಬಲವಂದು, ಅದುವೆ ಹದನು ॥ ಕರಣವಳಿಯೆ, ಉರು ಪಾಪ ತೊಳೆಯೆ, ದಾಟುವರು ಸಾವಿನೆಲ್ಲೆ ನಂಬಿದವರು ಗಳಿಸುವರು ಸ್ಥಿರದ ಗಣಪದವಿಯನ್ನು ಇಲ್ಲೆ ॥ ೫೫ ತೂತು ಬಿದಿರು ಕೊಳಲಾಗಿ ಊದುತಿರೆ, ಗಾಳಿ ತೂರಿ ನೂಗಿ ಶಿವನ ತ್ರಿಪುರ ಜಯಗೀತ ಹಾಡೆ ಕಿನ್ನರರು ದನಿಯ ತೂಗಿ ॥ ನಿನ್ನ ಗುಡುಗು ಮದ್ದಳೆ ಮೃದಂಗದೊಲು ತುಂಬೆ ದರಿಯ ಜಾಡು ಕೂಡಿದಂತೆ ಸರಿ, ಶಿವನ ನಾಟ್ಯಸಂಗೀತ ದೀಡು ಜೋಡು ॥ ೫೬ ಮಂಜು ಬೆಟ್ಟವನು ಮೀಟು, ಹಂಸದ್ವಾರವನು ದಾಟು ಓಡು ಕ್ರೌಂಚ-ರಂಧ್ರದಲ್ಲಿ ವೀರ ಭಾರ್ಗವನಪೂರ್ವಶೌರ್ಯ ನೋಡು ॥ ಉತ್ತರಕ್ಕೆ ಹರಿ ಹಾಗೆ, ತೋರುತಿರೆ ನಿನ್ನ ರೂಪ ಭೇದ ಬಲಿಯ ಮೆಟ್ಟಲೆಂದೆತ್ತಿದಂಥ ವಿಷ್ಣುವಿನ ಶ್ಯಾಮ ಪಾದ ॥ ೫೭ ಹಿಂದೆ ಸಂದ ರಾವಣನು ಬಿಡಿಸಿದನು ಇದರ ಸಂದುಜೋಡು ದೇವತೆಯರ ಕನ್ನಡಿಯೆ ಆದ ಕೈಲಾಸವದುವೆ ನೋಡು ॥ ಬಾನ ಮುಟ್ಟಿ ಕೆಲ ಶಿಖರವೆತ್ತಿ ಬೆಳಕೊತ್ತಿ ಒಟ್ಟಿದಂತೆ ದಿನವು ಕೂಡಿ ಹಲರಾಶಿಯಾದ ಶಿವನಟ್ಟಹಾಸದಂತೆ ॥ ೫೮ ಎಣ್ಣೆಗಲಸು ಕಾಡಿಗೆಯ ಬಣ್ಣದವ ನೀನು ನಗದ ತುದಿಗೆ ಕೋರೆ ಹಲ್ಲಗೆರೆಯಂತೆ ಕೊರೆದ ಕೈಲಾಸ ಕೀಳು ಬದಿಗೆ ॥ ಚಿತ್ತ-ಚಿತ್ರಪಟದಲ್ಲೆ ಬಲ್ಲೆ ನೀನಲ್ಲಿ ಹೇಗೆ ಕಾಂಬೆ ಹೆಗಲಿನತ್ತ ಬಲಭದ್ರ ಹೊತ್ತ ಕಂಬಳಿಯೊ ಏನೋ ಎಂಬೆ ॥ ೫೯ ತೋಳ ಹಾವ ಬಿಚ್ಚಿಟ್ಟು ಸತಿಗೆ ಕೈಗೊಟ್ಟು, ಕಾಲನಡಿಗೆ ಲೀಲೆಯೆನಲು ಶಿವ, ಬೆಟ್ಟವೊತ್ತಬಹುದಾಗ ಗೌರಿಯಡಿಗೆ ॥ ಮೇಘ, ಮೈಯನೊಟ್ಟಯಿಸಿಕೊಂಡು ಘನದಟ್ಟ ಒಟ್ಟಿಲಾಗಿ ಶಿವನ ಸತಿಯ ಪದತಲಕೆ ಎರಗು ಮಣಿತಟಕೆ ಮೆಟ್ಟಿಲಾಗಿ ॥ ೬೦ ಬಳೆಯ ಚುಚ್ಚಿ , ಮಳೆ ಸುರಿಯ ಹಚ್ಚಿ , ಕೆಳಗಿಚ್ಛೆಯಂತೆ ಮೆಚ್ಚಿ ದಿವ್ಯ ಯುವತಿಯರು ಜಳಕ ಮಾಡೆ ಮಾಡ್ಯಾರು ಮೋಡ ಕೆಚ್ಚಿ ಮೋಕ್ಷ ಕೊಡರು ದುಡಿಸುವರು ದಣಿಯೆ, ಬಲು ಮೆತ್ತನವನ ಕಂಡು ಆಟಕಾಗಿ ಗದ್ದರಿಸಿ ಒಮ್ಮೆ ನಡೆ ನಿನ್ನ ಬಿಡಿಸಿಕೊಂಡು ॥ ೬೧ ಚೆನ್ನ ಹೊನ್ನ ತಾವರೆಯ ಪಡೆವ ಮಾನಸದ ನೀರು ಕುಡಿಯೈ ನೀರ ಕುಡಿಯುತಿರೆ ಬಟ್ಟೆ ಮುಸುಕು ಐರಾವತಕ್ಕೆ ಹಿಡಿಯೈ ॥ ಕಲ್ಪವೃಕ್ಷಗಳ ಚಿಗುರು ಎಲೆಯ ತೂರಾಡು ತಾರು ಮಾರು ಗೆಳೆಯನಲ್ಲಿ ಬಂದಿರುವೆ ಇಲ್ಲಿ ನಿನ್ನಾಟ ತಡೆವರಾರು ॥ ೬೨ ಪ್ರಿಯನ ತೊಡೆಗೆ ಹರಿದಿರುವ ಸೇಲೆಯೆನೆ ಗಂಗೆ ಅಲ್ಲಿ ಹರಿಯೆ ಮೋಹಮುತ್ತು ಮುಡಿದಲ್ಲಿ ಮಾಡ ರಮಣಿಯರ ತೆರದಿ ಮೆರೆಯೆ ॥ ಹೋಗು ನೋಡು ಒಂದೊಂದು ಸಲಕೆ ಈ ಅಲಕೆಯಿಂದ ಬೇರೆ ಕಣ್ಣುಮುಟ್ಟೆ ಇನ್ನೊಮ್ಮೆ ಕಾಣದೇ ಕಂಡೆ ಎನ್ನಲಾರೆ ॥ ೬೩ ಶಬ್ದಾರ್ಥ : ಉದಕ=ನೀರು. ಕೋಡು=ಬೆಟ್ಟದತುದಿ, ಅನುಚರ=ಸೇವಕ, ಒಸಗೆ=ಶುಭಸಮಾಚಾರ. ಕುರುಳೋಳಿ-ಕುರುಳ್=ಕೂದಲು; ಓಳಿ=ಸಮೂಹ. ಚಾದಗೆ=ಚಾತಕಪಕ್ಷಿ-ಮಳೆಯ ಹನಿಯನ್ನು ಕುಡಿದು ಜೀವಧಾರಣೆ ಮಾಡುವುದೆಂದು ನಂಬಿಗೆ, ಬಂಜು=ಬಂಜೆ, ಅಫಲ ಅವಸ್ಥೆ, ತವಿಸು=ಕಡಿಮೆ ಮಾಡು. ಸವಿಸಿ=ರುಚಿನೋಡಿ. ನಿಚುಲ-ಹೊದಿಕೆ, ಕವಚ, ಮಾಳ=ಹೊಲದಲ್ಲಿಯ ಎತ್ತರವಾದ ಪ್ರದೇಶ. ಎಲೆಮಾಡ=ಮೇಲಕ್ಕೆ ಏರಬಲ್ಲ ಎಲೆಬಳ್ಳಿ, ರೇವೆ=ನದಿ, ಕಡವಾಲ=ಕದಂಬ ವೃಕ್ಷ, ದಶಾರ್ಣ=ಮಧ್ಯಪ್ರದೇಶ. ಸುಂದು=ಮಲಗು, ವಿಶ್ರಾಂತಿಪಡೆ, ಕಮರೆ=ಬಾಡಲು, ಸುಟ್ಟುಹೋಗಲು, ಪಾಮರ ಪಾಮರಿಯರು=ಕಿರಾತ ಪುರುಷರು ಸ್ತ್ರೀಯರು, ಸುಸಿಲ=ಸಂಭೋಗ, ಶಿಪ್ರಾವಾತ=ಮಂದವಾದ ಗಾಳಿ, ತರಹರಿಸು=ತಾಳ್ಮೆಯಿಂದ ಇರು. ಚಳ-ಕಾಂತಿಯುಕ್ತ, ಉರು=ಅಧಿಕ. ಜಾಡು=ಸಾಲು. ಈಡು=ತೃಪ್ತಿದಾಯಕ. ಕೆಚ್ಚಿ=ಕೆತ್ತಿ . ತಾರುಮಾರು=ತ್ವರಿತಗತಿಯಿಂದ, ಸೇಲೆ-ಸೆಲ್ಲೆ , ಬಟ್ಟೆ . ತನ್ನ ತೇಜಸ್ಸಿನಿಂದ ಅಂತರಿಕ್ಷವನ್ನೆಲ್ಲ ತುಂಬುವವಳೂ, ಉದಕಕ್ಕೆ ನಿರ್ಮಾಪಕಳೂ ಆದ ಊರ್ವಶಿಯನ್ನು ಶ್ರೇಷ್ಠ ಮಾನವನಾದ ನಾನು (ಪುರೂರವ) ನನ್ನ ವಶಕ್ಕೆ ತೆಗೆದುಕೊಳ್ಳುತ್ತೇನೆ. ಉತ್ತಮವಾದ ಕರ್ಮ ಕರ್ತೃವಾದ ಪುರೂರವನು ನಿನ್ನನ್ನು ಸಮೀಪಿಸಿ, ನಿನ್ನ ಸಹಸೌಖ್ಯವನ್ನು ಅನುಭವಿಸಲಿ. ನಿನ್ನ ವಿರಹದಿಂದ ನನ್ನ ಹೃದಯವು ತಪಿಸುತ್ತಿದೆ ಹಿಂತಿರುಗು" ಋಗ್ವದ ಮಂ. ೧೦.೯೫-೧೭. ಈ ಸೂಕ್ತದ ಹಿನ್ನೆಲೆ ಉತ್ತರ ಮೇಘದೂತಕ್ಕೆ ಇದೆ. ಊರ್ವಶಿ ಮತ್ತು ಪುರೂರವಸ್ಸಿನ ಸಂಭಾಷಣೆ ರೂಪವಾದ ಪ್ರಕರಣವು ಲೌಕಿಕವಾದ ಪ್ರೇಮ ಮತ್ತು ವಿರಹಗಳನ್ನು ಪ್ರಕಾಶಪಡಿಸುವುದರ ಮೂಲಕ ಅಲೌಕಿಕವಾದ ತತ್ತ್ವವನ್ನು ಪ್ರತಿಪಾದಿಸುವ ಆಖ್ಯಾನಗಳಲ್ಲಿ ಒಂದಾಗಿದೆ. ವಿಶೇಷ : ಕಾರ್ತಿಕ ಶುಕ್ಲ ಏಕಾದಶಿಗೆ ಉತ್ಥಾನ ಏಕಾದಶಿ' 'ಬೋಧಿನಿ ಏಕಾದಶಿ' ಎಂಬ ಹೆಸರುಗಳು ಪ್ರಚಾರದಲ್ಲಿವೆ. ದೇವರು ಅಂದು ಏಳುತ್ತಾನೆ. ತುಳಸಿಯ ಕೂಡ ಅವನ ವಿವಾಹವಾಗುತ್ತದೆ. ಕರಿಯ ತುಳಸಿಗೆ 'ಕುಬೇರಕ' ಎನ್ನುತ್ತಾರೆ ಎಂಬುದು ಲಕ್ಷಿಸುವಂಥ ಮಾತು. ಭಾಗವತ ಸಾಂಪ್ರದಾಯದವರು ಆಷಾಢ ಕಾರ್ತಿಕಕ್ಕೆ ಪಂಢರಪುರಕ್ಕೆ 'ವಾರಿ' ಹೋಗುತ್ತಾರೆ. ಇಂಥ ಒಂದು ವ್ರತಕಥೆಯನ್ನು ಜಗದ್ವಿಖ್ಯಾತವಾಗುವಂತೆ, ಕಾವ್ಯವಾಗಿ ಮಾರ್ಪಡಿಸಿದ್ದು ಕಾಲಿದಾಸನ ಪ್ರತಿಭೆಗೆ ಭೂಷಣವೆಂದೇ ಹೇಳಬಹುದು. ಕಾರ್ತಿಕದೊಳಗಿನ ಧರಣೀವ್ರತವನ್ನು ಶಕುಂತಲೆ ಕೂಡ ಆಚರಿಸಿದ್ದಳು ಎಂದು ವರಾಹ ಪುರಾಣವು ಹೇಳುತ್ತದೆ. ಇದು ಯೋಗೇಶ್ವರ ದ್ವಾದಶಿ ವ್ರತವು, ಯಕ್ಷನ ವಿಯೋಗ ಶಾಪ ಹೋಗಿ ಯಕ್ಷಯಕ್ಷಿ ಮಿಲನದ ಯೋಗ ತರುತ್ತದೆ. ಅಂಬಿಕಾತನಯದತ್ತರ ಕನ್ನಡ ಮೇಘದೂತ ಉತ್ತರ ಮೇಘ "ನಿವರ್ತಸ್ವ ಹೃದಯಂ ತಪ್ಯತೇ ಮೇ ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ: ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೨೭ ಮಿಂಚನುಳ್ಳ ಎಳೆವೆಂಡಿರುಳ್ಳ, ಮಳೆಬಿಲ್ಲ ಬಣ್ಣ ತಾಳಿ, ಹಾಡಿಗಾಗಿ ಗುಡುಗುಡುಗಿದಂತೆ ಮದ್ದಳೆಯ ಸೊಲ್ಲ ಹೇಳಿ ॥ ಮುಗಿಲ ಮುಟ್ಟ ಕರುಮಾಡ ಮುತ್ತು ರತುನಗಳ ನೀರು ತುಂಬಿ ಇಹವು ಇಂಥ ಮಹಮನೆಗಳಲ್ಲಿ ಅವು ನಿನಗೆ ಸಾಟಿ ಎಂಬಿ ॥ ೧ ಮಾಟ ತಾವರೆಯು ಕೈಗೆ, ಕುರುಳಿನಲಿ ಬಾಲಕುಂದ ಮಾಲೆ, ಲೋಧ್ರ ಪುಷ್ಪಗಳ ಸೂಸು ಹುಡಿಯು ಚೆಲುವಾದ ಮೊಗದ ಮೇಲೆ ॥ ಚೆಂದ ಕುರುವಕವು ಹೆಳಲಿನಲ್ಲಿ, ಸಿರಸಲವು ಕಿವಿಯ ಬಳಿಗೆ ಬೈತಲಲ್ಲಿ ಕಡವಾಲ ಹೂವು ಅಲ್ಲಿರುವ ಹೆಣ್ಣುಗಳಿಗೆ ॥ ೨ ಯಕ್ಷರಲ್ಲಿ, ಬಿಳಿ ಹರಳಿನಿಂದ ರಚಿಸಿರುವ ಸೌಧಗಳಲಿ, ಚುಕ್ಕೆ ನೆರಳೆ ಅರಳಾಗಿ ಹಾಸೆ, ನಲುವೆಣ್ಣ ತೋಳುಗಳಲಿ ॥ ನಿನ್ನ ಗುಡುಗಿನೊಡಗೂಡಿ ನುಡಿಸುವರು ವಾದ್ಯವಾದ್ಯವಾಗಿ ಬಯಕೆ-ತಾಳೆ-ಹಾಲನ್ನು ಕುಡಿವರೋ ಕಾಮಕೇಳಿಗಾಗಿ ॥ ೩ ನಂದನಂಗಳಲಿ ಗಂಗೆ ಮಿಂದ ತಂಗಾಳಿ ಹಾಯುವಲ್ಲಿ ಅಲ್ಲೆ ತೀರದಲಿ ಬಿಸಿಲ ಮರೆಸಿ ಮಂದಾರ ಛಾಯೆಯಲ್ಲಿ ॥ ಹೊನ್ನ ಮಳಲು ಮಣಿ ತೂರಿ ಆಡುವರು ಹುಟ್ಟುಜವ್ವನಿಯರು ಅಮರರಿಂದ ಪ್ರಾರ್ಥಿತರು ಆಗುವರು ಅಮರ ಕನ್ನಿಕೆಯರು ॥ ೪ ಉಟ್ಟ ರೇಸಿಮೆಯ ನೀರಿ ಸೆಳೆಯೆ ಆತುರದ ಕರಗಳಿಂದಾ ಮತ್ತೆ ಜರೆಯಲಿರೆ ಮೊದಲೆ ಸಡಲಿದಾ ಕಟಿಯ ನೀವಿಬಂಧ ॥ ತೊಂಡೆ ತುಟಿಯ ಮರುಳೆಯರು ಪ್ರಿಯರಿದಿರು ನಾಚಿ ಬಳುಕಿ ಬಗ್ಗಿ ರತ್ನದೀಪ ನಂದಿಸಲು ಹವಣಿಪರು ಸುಳ್ಳೆ ಹುಡಿಯನುಗ್ಗಿ ॥ ೫ ಬಿಡದೆ ಬೀಸುವಾ ಗಾಳಿಯೊಡನೆ ಮನೆಯೇಳು ನೆಲೆಯನೇರಿ ಅಲ್ಲಿ ಗೊಂಬೆಗಳನಂದಗೆಡಿಸಿ ಹನಿಯಿಂದ, ಹೆದರಿ ಜಾರಿ ॥ ತಪ್ಪಿತಸ್ಥರೆನೆ ಕಂಡಿಯಿಂದ ಹೊರಬೀಳತಾವ ನೂಗಿ ಮರಳಿ ಮೋಡ ತೊಟ್ಟಿಕ್ಕತಾವ ಹರಿ ಹಿಂಜು ಮಂಜು ಆಗಿ ॥ ೬ ಹೊದ್ದ ಮೋಡ ಹೊರಾಪಾಗಿ, ಬಿದ್ದ ಬೆಳದಿಂಗಳಿಂದ ಕುಸುರಿ ಚಿಕ್ಕಿ ಚುಕ್ಕಿ ಸುರಿದಂತೆ ಕಿಟಿಕಿ-ತೆರೆ ಚಂದ್ರಕಾಂತ ಒಸರಿ ಪ್ರಿಯರ ತೆಕ್ಕೆ ತೋಳೊಳಗೆ ಉಸುರು ಬಿಡುತಿರಲು ಹೆಂಗಳೊರಗಿ ಕೂಟದಾಟದಾಸರವ ತಣಿಸುವವು ತಾವೆ ಮರುಗಿ ಕರಗಿ ॥ ೭ ತೀರದಿರುವ ತವನಿಧಿಯು ತುಂಬಿದಾ ಕಾಮಿ ಜನರು ಕೂಡಿ ಅಮರ ಗಣಿಕೆಯರ ಸಂಗದಲ್ಲಿ ಸರಸಾऽಲಾಪ ಮಾಡಿ ॥ ರಕ್ತಕಂಠಕಿನ್ನರರು ಧನದ ಯಶಗೀತ ಹಾಡೆ ಮೀರಿ ಕಾಲ ಕಳೆಯುವರು ದಿನವು ಚೈತ್ರರಥವೆಂಬ ತೋಟ ಸೇರಿ ॥ ೮ ದುಡುಕು ನಡಿಗೆಯಲಿ ಅಲಕದಿಂದ ಮಂದಾರ ಹೂವು ಉದುರಿ ಬೀದಿಯುದ್ದಕೂ ಚಿಗುರುತಿಗುರು, ಕಿವಿಕನಕ-ಕಮಲ ಬಿದಿರಿ ॥ ನೂಲು ಹರಿದು ಎದೆಯುಜ್ಜಿ ಜರಿದು ಸರ ಮುತ್ತು ತೊಳಗತಾವ ಮತ್ತ-ಕಾಮಿಗಳ ಇರುಳ ಹಾದಿಯನು ಬೆಳಗು ಬೆಳಗತಾವ ॥ ೯ ಧನದ ಪತಿಯು ಜೊತೆಯಿವನು ಶಿವನು ಇಲ್ಲಿರುವನೆಂದು ಬಗೆದು ಕಬ್ಬು-ತುಂಬಿ-ಹೂವುಗಳ ಬಿಲ್ಲು-ಹೆದೆ-ಬಾಣ ದೂರ ಒಗೆದು ॥ ಕಾಮಿಗಳಿಗೆ ಗುರಿಯಿಟ್ಟನಂಗನಿಹನಿಲ್ಲಿ ಕುಡಿಯ ಕಣ್ಗೆ ಇಲ್ಲದಿದ್ದರೀ ಹುಬ್ಬ-ಬಿಲ್ಲಿನಲಿ ಮುರುಕವೇಕೊ ಹೆಣ್ಗೆ ॥ ೧೦ ರಂಗು ರಂಗಿನಾ ಸೀರೆ, ಕಣ್ಣ ತಿರುಪಾಟವಾಡೆ ಮಧುವು, ಹೂವು ಹೂವು, ಹಲಚಿಗುರು, ಒಡವೆ ತೊಡವಾಗಬಲ್ಲ ಒದವು ॥ ಅಡಿಯ ಕಡೆಯ ಕಾರಣೆಯ ಅರಗಿನಾ ಬಣ್ಣ, ಒಂದೆ ಎರಡೇ ಹೆಣ್ಣಿನೆಲ್ಲ ಸಿಂಗರವನೀವುದಾ ಕಲ್ಪವೃಕ್ಷ ಬರಡೇ ? ॥ ೧೧ ಅಲ್ಲಿ ನಮ್ಮ ಮನೆ, ಯಕ್ಷಪತಿಯ ಮನೆಯುತ್ತರಕ್ಕೆ ಇಹುದು ಇಂದ್ರಚಾಪ ತೋರಣದಿ ಮೆರೆದು ದೂರಿಂದ ಕಾಣಬಹುದು ॥ ಹತ್ತಿರಕ್ಕೆ ನನ್ನಾಕೆ ನೀರನುಣಿಸಿರುವ ಕಂದನಾಗಿ ಕೈ ಎತ್ತರಾದ ಮಂದಾರವೊಂದು ಇದೆ ಗೊಂಚಿಲಾಗಿ ಬಾಗಿ ॥ ೧೨ ಪಚ್ಚೆಕಲ್ಲ ಮೆಟ್ಟಿಲುಗಳುಳ್ಳ ಹೊಕ್ಕರಣಿ ತುಂಬ ಅಗಲಾ ಹೊನ್ನ ಕಮಲಗಳ ಕಾವು ಹೋಲುತಿದೆ ಹಸಿರು ನೀಲಿ ಮುಗಿಲಾ ॥ ಹತ್ತಿರಕ್ಕೆ ಮಾನಸವು ಇರಲಿ, ನೀ ಬರಲಿ ಮೇಲೆ ಠಾವು ಬಿಡದೆ ಹಂಸ ನಮ್ಮಲ್ಲೆ ಆಡುವವು ತೃಪ್ತವಾಗಿ ತಾವು ೧೩॥ ಮಾಟ-ಗುಡ್ಡ ಬಿಳಿನೀಲಿ ಮಣಿಯ ಕೋಡಾಗಿ ಅದರ ಬಳಿಗೆ ಇಹುದು ಬೇಲಿ ಹೊಂಬಾಳೆಯಾಗಿ ಹವಣಾಗಿ ಸುತ್ತುವಳಿಗೆ ॥ ಅದುವು ಮುದ್ದು ನನ್ನಾಕೆಗಣ್ಣ , ಅದರಂತೆ ನಿನ್ನ ಮೋಡಿ ಅದರ ನೆನಪೆ ನನಗಾಗುತಿಹುದು ಮಿಂಚುಳ್ಳ ನಿನ್ನ ನೋಡಿ ॥ ೧೪ ಸುತ್ತುಮುತ್ತು ಮದರಂಗಿ, ನಡುವೆ ಮಾಧವಿಯ ಬಳ್ಳಿ ಮಾಡ ಅತ್ತ ಚೆಂದ ಕೇಸರವು, ಇತ್ತಲಿದೆ ಕೆಂಪಶೋಕ ನೋಡಾ ॥ ಒಂದು ಬೇಡುವದು ನಿನ್ನ ಸಖಿಯ ಎಡಗಾಲು ಸೋಂಕಲೆಂದು ಮುಕ್ಕು ಮಧುವನುಗುಳಿದರೆ ಸಾಕು ಬಯಸುವದು ಮತ್ತಿನೊಂದು ॥ ೧೫ ಮರದ ನಡುವೆ ಬಿಳಿ ಹಾಸುಗಲ್ಲು ಬಂಗಾರ ಕೋಲು ನಡಕೆ ಎಳೆ ಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ ॥ ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ ಕೈ ತಟ್ಟಿ ಮಾಟ, ಬಳೆ ತಾಕಲಾಟ, ಥಕಥೈಯ ಥಾಟಿನಲ್ಲಿ ॥ ೧೬ ಇಂತು ನಮ್ಮ ಮನೆ ಕಂಡುಕೊಳ್ಳು ನೀ ಬೇರೆ ಗುರುತೆ ಇದಕೆ ಶಂಖ ಪದ್ಮಗಳು ದ್ವಾರಪಾಲರೊಲು ಎಡಕೆ ಬಲಕೆ ಇದಕೆ ॥ ಅಲ್ಲಿ ಬಣ್ಣಗುಂದಿರುವ ಮನೆಯು ತೋರುವದು ನನ್ನ ಒಲವಾ ಸೂರ್ಯನಿಲ್ಲದಿರೆ ಕಮಲವೆಂತು ತೋರೀತು ತನ್ನ ಚೆಲುವಾ ॥ ೧೭ ಆನೆ ಮರಿಯವೊಲು ಮಾಟವಾಗಿ ಒಳ ಸೇರು ಅಲ್ಲಿ ಹೋಗಿ ಮೊದಲು ಹೇಳಿದಾ ಕೃತಕಶೈಲವನ್ನೇರು ಅರಸನಾಗಿ ॥ ನಿನ್ನ ಮಿಂಚುಗಣ್ಣನ್ನು ಮಿಟುಕಿಸುತ ಮಿಂಚುಹುಳವ ಮಾಡು ಆಗ ನಮ್ಮ ಮನೆಯಲ್ಲಿ ನಿನ್ನ ನೋಟವನು ಚೆಲ್ಲಿ ನೋಡು ॥ ೧೮ ಬಳ್ಳಿ ಮೈಯು, ನನೆಹಲ್ಲು, ಕೆಂಪು ತುಟಿ ಹಣ್ಣು ತೊಂಡೆಯಂತೆ ಸಣ್ಣ ನಡುವು, ಚೆಲು ಹುಲ್ಲೆಗಣ್ಣು, ಕುಳಿ ನಾಭಿ ಸುಳಿಗಳಂತೆ ॥ ತುಂಬು ಎದೆಗೆ ನಸು ಬಾಗಿ, ಹರಹು ಹಿಮ್ಮೈಗೆ ಮಂದವಾಗಿ ಎಲ್ಲ ಹೆಣ್ಣಿನೊಳೆ ಬ್ರಹ್ಮಕೃತಿಗೆ ಹೊಸ ಹೊಚ್ಚ ಚೊಚ್ಚಿಲಾಗಿ ॥ ೧೯ ಹೆಚ್ಚು ಮಾತು ಇರದಚ್ಚ ಅವಳೆ ತಿಳಿ ನನ್ನ ಪ್ರಾಣವೆಂದು ನನ್ನನಗಲಿ ಇಹಳೆಂತೊ ಇರುವವೊಲು ಚಕ್ರವಾಕಿಯೊಂದು ॥ ಕಾಲ ಕಳೆದ ಹಾಗೆಲ್ಲ ಕಾಣುವಾತುರವು ಆಳವಾಗಿ ಇಹಳು ಬೇರೆ ಪದ್ಮಿನಿಯೊ ಏನೋ ಚಳಿಕುಳಿರ ಸೋಂಕು ತಾಗಿ ॥ ೨೦ ಅತ್ತು ಅತ್ತು ಮತ್ತತ್ತು ಕೆದರಿಕೊಂಡಿಹುದು ಕಣ್ಣ ಪೊಗರು ಬೆಚ್ಚನುಸಿರನುಂಡುಂಡು ಸೊಪ್ಪೆಯಾಗಿಹುದು ತುಟಿಯ ಚಿಗುರು ॥ ಗಲ್ಲದಲ್ಲಿ ಕೈ, ಓರೆ ಮೋರೆ, ನಿಡಿಗೂದಲುದ್ದ ಚಿಂತೆ ಮೋಡ ಮುಸುಕಲಿರೆ ಮಂಕುಗವಿದ ಆ ದೀನ ಚಂದ್ರನಂತೆ ॥ ೨೧ ಅವಳು ಬೀಳುವಳೊ ನಿನ್ನ ಕಣ್ಗೆ ಆಚಾರದಲ್ಲಿ ತೊಡಗಿ ಸೊರಗಿ ಕಡ್ಡಿಯಾದವನ ನನ್ನ ಚಿತ್ರವನೆ ಬರೆದ ಹುಡುಗಿ ॥ ಇಲ್ಲ ಕೇಳುತಿರಬಹುದು ಸಾಕುಸಾರಿಕೆಯ - "ಹೇಳೆ ಜೇನೇ ಅವನ ಮುದ್ದು ನೀ, ನಿಮ್ಮ ಒಡೆಯರನು ಒಮ್ಮೆ ನೆನೆವೆಯೇನೇ ?" ॥ ೨೨ ನನ್ನ ಕುರಿತು ಪದವೊಂದು ಕಟ್ಟಿ ಅದ ಹೇಳಲೆಣಿಸಿ ಜಾಣೆ ತಾನೆ ರಚಿಸಿದಾ ಏರು-ಇಳುವುಗಳ ಕ್ರಮವ ಮರೆತು ತಾನೇ ॥ ತೊಟ್ಟು ಸುರಿವ ಕಂಬನಿಯ ತಂತಿಯನೆ ಮಿಡಿಯುತಿಹಳೊ ದೀನೆ ಮಾಸುಬಟ್ಟೆ ತೊಟ್ಟವಳ ತೊಡೆಯೊಳಿರಬಹುದು ಬಿದ್ದ ವೀಣೆ ॥ ೨೩ ಕಳೆದವೆಷ್ಟು ಇನ್ನುಳಿದವೆಷ್ಟು ದಿನವೆಂದು ಲೆಕ್ಕವಿಟ್ಟು ಹೊಸ್ತಿಲಕ್ಕೆ ಹೂವಿಟ್ಟು ನೋಡುವಳೊ ನಾನು ಹೋದ ತೊಟ್ಟು ॥ ಇಲ್ಲ ಎದೆಯ ಮುಟ್ಟಿಳಿದ ಮೊದಲ ಸಂಗಗಳ ಸವಿವಳೇನೋ ನಲ್ಲರಗಲೆ ನಲ್ಲೆಯರಿಗೆಲ್ಲ ಇವು ಆಟ ಇಷ್ಟೆ ತಾನೋ ? ॥ ೨೪ ಹಗಲು ಹೊತ್ತು ಹೋದೀತು ಕೆಲಸದಲಿ ಹೇಗೊ, ಬಲ್ಲೆ ನಾನು ಇರುಳು ಅವಳ ಗತಿಯೇನೋ ? ಅಳುವದೋ ? ನೆನೆಯಲೊಲ್ಲೆ ನಾನು ॥ ನನ್ನ ಸುದ್ದಿ ಹೇಳಿದರೆ ಸಾಕು, ನೀನಿಣಿಕಿ ನೋಡು, ಪಾಪಾ ಸ್ವಾ ನೆಲದೊಳೇ ನಿದ್ದೆಯಿಲ್ಲದೇ ಹೊರಳುತಿರುವ ತಾಪಾ ॥ ೨೫ ಹೊರಳು ಮಗ್ಗುಲಗಲಿಕೆಯ ಹಾಸಿನಲಿ ಸೋತ ಮೈಯ್ಯ ಚೆಲ್ಲಿ ಓರೆಯಾಗಿ ಬಿದ್ದಿರುವ ಚಂದ್ರಕಳೆಯಂತೆ ಪಡುವಲಲ್ಲಿ ॥ ಯಾವ ಇರುಳು ನನ್ನೊಡನೆ ಬೇಟದಲಿ ಕ್ಷಣಿಕವಾಗಿ ಹೋಯ್ತು ಅವಳಿಗದುವೆ ಬಿಸಿಯುಸಿರಿಯತ್ತು ಮುಗಿದೀತೆ ಎನುವೊಲಾಯ್ತು ॥ ೨೬ ಇಂಪುಗರೆವ ಇಂದುವಿನ ಕಿರಣ ಜಾಳಾಂದ್ರದಿಂದ ಸುರಿಯೆ ಆಸೆಗೂಡಿ ಹರಿದೋಡಿ, ನೋಡಿ, ಒಡೆದಂತೆ ಹಿಂದೆ ಸರಿಯೆ ॥ ಮುಚ್ಚಲಿಲ್ಲ, ಸರಿ, ಬಿಚ್ಚಲಿಲ್ಲ ಎನುವಂಥ ಕಮಲದಂತೆ ಎವೆಯು ತೊಯ್ದು ಕಣ್ತೆರೆಯಲೊಲ್ಲದೇ ನಿಲ್ವಳೇನೋ ಭ್ರಾಂತೆ ॥ ೨೭ ತುಟಿಯ ಚಿಗುರನೊಣಗಿಸುವ ಉಸಿರಿನಲೆ ಹಾರಿಸುವಳು ಎಲ್ಲಾ ಎಣ್ಣೆ ಕಾಣದುರುಟಾದ ಮುಂಗುರುಳು ಒಲೆಯೆ ಗಲ್ಲಗಲ್ಲಾ ॥ ಕಣ್ಣ ತುಂಬ ಕಂಬನಿಯೆ ಆಗಿ, ಕುದಿಯುವಳೊ ತಾನು ಬೆಂದು ನಿದ್ದೆ ಬಂದು, ಕನಸಾರೆ ಕಂಡು, ಸೇರೇನೆ ನನ್ನನೆಂದು ॥ ೨೮ ಅಗಲಿದಂತೆ ಕಟ್ಟಿತ್ತು ಮುಡಿಯು, ಬಿಚ್ಚಿತ್ತು ಹೆಳಲಮಾಲೆ ಕೂಡಿದಂದು ಹಾಕೇನು ನಾನು, ಮುಡಿಸೇನು ಎಂದು ಬಾಲೆ ॥ ಕಾದು ಇಹಳು, ಜಡೆಗಟ್ಟಿ ಗಲ್ಲಗಳನುಜ್ಜಿ ಅವುಗಳೊತ್ತೆ ಸಮರುತಿಹಳು ಬೆಳೆದುಗುರಿನಿಂದೆ ಕೂದಲವ ಮತ್ತೆ ಮತ್ತೆ ॥೨೯ ತೊಡಿಗೆ ತೊರೆದು ಹೆಣವಾಗಿ ಇಹಳೊ ನಾ ಹೇಳಲೇಕೆ ಬಣ್ಣ ಹಾಸಿನಲ್ಲು ಮೈ ಹೊರಳುವಾಗಲೂ ನರಳುತಿಹಳೊ ಸಣ್ಣ॥ ನೀನು ಕೂಡ ಅದ ಕಂಡ ಕೂಡಲೇ ಹನಿಸಿ ಬಿಡುವಿ ಕಣ್ಣ ಕರುಳುಯಿದ್ದ ಎದೆಗಾರರಾರಿದಕೆ ಕರಗದಿರುವರಣ್ಣ ? ॥ ೩೦ ನನ್ನಳೊಲೆದ ಆ ನಿನ್ನ ಅತ್ತಿಗೆಯ ಚಿತ್ತವಿಷ್ಟು ನೊಂದು ತರ್ಕಿಸುವೆನು ಮೊದಲಗಲಿ ನನ್ನ ಇರಬಹುದು ಹೀಗೆ ಎಂದು॥ 'ನಾನೆ ಕಾಮ, ಲೋಕೈಕ ಪತಿಯು' ಎನುವಂತೆ ಸತಿಯ ಲೀಲೆ ಬಣ್ಣಿಸಿದೆನು ವಾಚಾಳಿಯಂತೆಯೋ ? ಹೇಳು ಕಂಡ ಮೇಲೆ ॥ ೩೧ ಕುರುಳು ಜೋತು, ಕುಡಿಗಣ್ಣು ಮುಚ್ಚಿ ; ಮಂಕಾಗಿ ಕಾಡಿಗಿರದೇ ಮಧುವ ಕುಡಿಯದೊಣಕಾದ ನಯನ ಮುರಿ ಹುಬ್ಬಿನಾಟ ಮರೆದೇ ॥ ಹಾರಿ ತನ್ನ ಎಡಗಣ್ಣು, ಬೆಚ್ಚೆ ಬರಿ ಬಾನ ತುಂಬೆ ನೀನೋ ಸುಳಿಯೆ ಮೀನ ಚಲಕಮಲದಂತೆ ಆ ಕಣ್ಣು ಕಾಂಬವೇನೊ ॥ ೩೨ ಕೆಲಕೆ ಎಡಕೆ ಇನ್ನೂನು ಬಿದ್ದಿಹುದು-ಏನೊ ಕೆಟ್ಟ ಗಳಿಗೆ ! ನಡುವುಸುತ್ತಿನಾ ಮುತ್ತು ಮಾಲೆ ಸಿಕ್ಕನ್ನ ಉಗುರುಗಳಿಗೆ ॥ ಕಂಡು ಅದನು ಹೊಂಬಾಳೆದಿಂಡುದೊಡೆ ಅದಿರೆ, ನಾನು ಬಳಿಗೆ ಇಲ್ಲ, ಗಳಿಗೆ ಕಳೆಯುವಳು ನನೆಸಿ ಆ ನೀರೆ ನಿರಿಗೆಗಳಿಗೆ ॥ ೩೩ ನೀನು ಹೋದ ಆ ಹೊತ್ತೆ ನಿದ್ದೆ ಚಿತ್ತೈಸೆ ಅವಳ ನೋಡಾ ಮೇಘರಾಜ, ದಯೆಮಾಡಿ ತಡೆಯೊ ಹುಸಿ ಗುಡುಗು ಹಾಕಬೇಡಾ ॥ ಹೇಗೊ ಕನಸಿನಲಿ ಸೇರಿ ನನ್ನ ಮುಗಿಬಿದ್ದು ಕೊರಳ, ಹುಚ್ಚಿ ಎದ್ದಾಳೊ ಬಾಲೆ ಬಿದ್ದಾಳೊ ಬೆದರಿ ಕೈ ಮಲಕು ಬಿಚ್ಚಿ ಬೆಚ್ಚಿ॥ ೩೪ ತಂಗಾಳಿ ಬೀಸಿ ತುಂತುರಿಸಿ ನೀನು ಎಚ್ಚರಿಸಿದಾಗ ಬಾಲೆ ಮಳೆಯಾಗಿ ಮಿಂದ ಹೊಸ ಮೊಲ್ಲೆ ಮೂಸಿ ಮನ ವಾಸಿಯಾದ ಮೇಲೆ ॥ ಮಿಂಚಿನವನೆ ಹಿಗ್ಗಣ್ಣಿನವಳಿಗಾ ಬೆಳಕುಕಂಡಿಯಿಂದಾ ಮಾತನಾಡು ಗಂಭೀರವಾಗಿ ನಸು ಗುಡುಗು ಬೆಡಗಿನಿಂದಾ ॥ ೩೫ ಕೇಳು ಮಂಗಲೇ, ಬಂದೆ ನಾಥ-ಸ್ನೇಹಿತನು ಜಲದ ನಾನು ಅವನ ಕುಶಲವನು ಎದೆಯೊಳಿರಿಸಿಕೊಂಡಿಹೆನು, ಕೆಲಸವೇನು ? ॥ ದೂರ ಹೋದ ದಾರಿಗರ ತರುವೆನವರವರ ಮಂದಿರಕ್ಕೆ ತಮ್ಮ ನಲ್ಲೆಯರ ಹೆಳಲ ಬಾಚಿ, ಹಳೆ ಹಿಣಿಲ ಬಿಡಿಸಲಿಕ್ಕೆ ॥ ೩೬ ಹೀಗೆ ಹೇಳುತಲೆ, ಸೀತೆ ಹನುಮನನು ಕಾಣುವಂತೆ ಕಂಡು ನಿನ್ನ ಮಾತು ಎದೆಯುಬ್ಬಿ ಕೇಳುವಳೊ, ಅಪ್ಪ, ಇದಿರುಗೊಂಡು ॥ ಪ್ರಿಯರ ಕುಶಲ ಸ್ನೇಹಿತರೆ ಹೇಳಿದರೆ ಕೇಳಬೇಕೆ ನ್ಯೂನ? ಕಾಂತೆಯರಿಗೆ ಏಕಾಂತದಂತೆ ಕೂಟಕ್ಕು ಕಿಂಚಿದೂನ ! ॥ ೩೭ ಹೇಳು ನಿನ್ನ ಧರ್ಮಕ್ಕೆ, ನನ್ನ ಭಾಗ್ಯಕ್ಕೆ, ರಾಜಾ, ಬಾಳು ರಾಮಗಿರಿಗಳಲ್ಲಿರುವ ನಿನ್ನ ಸಂಗಾತಿಯೆಂದು ಹೇಳು ॥ ಒಳ್ಳಿತೇನೆ ಅಬಲೇऽ ಎಂದು ನನಗಾಗಿ ಕೇಳು ಕೂರ್ತು ಕಷ್ಟ ಸುಲಭವಿರುವಂಥ ಪ್ರಾಣಿಗಳಿಗಿದೇ ಮೊದಲ ಮಾತು ॥ ೩೮ ನಿನ್ನ ಹಾಗೆ ಮೈ ಸೊರಗಿ, ಕಾದು, ಕಣ್ಣುರಿಸಿ, ಕಂಠ ಬಿಗಿದು ಉಸಿರಿಗೆಟ್ಟು ನಿಟ್ಟುಸುರು ಯೋಗದಲಿ ದೇಶದೆಲ್ಲೆ ಜಿಗಿದು ॥ ವೈರಿ ವಿಧಿಯು ಕಟ್ಟಿರಲು ದಾರಿ, ತೆರೆದಿದ್ದೆ ಹಾದಿ ಜಾಣಿ ಭಾವದಿಂದ ಒಡಗೂಡ ಬಯಸಿದೆನೆ ನನ್ನ ಭಾವರಾಣಿ ॥ ೩೯ ಏನೊ ಹೇಳುವಾ ನೆವನ ಮಾಡಿ ತುಟಿ ತಂದು ಕಿವಿಯ ಬಳಿಗೆ ನಿನ್ನ ಸಖಿಯರಿದಿರಲ್ಲೆ ಒರಗಿರುತ್ತಿದ್ದೆ ಗಳಿಗೆ ಗಳಿಗೆ ॥ ಮಾತಿನಾಚೆ, ಕಣ್ಣಾಚೆ ನನ್ನವಳು, ಇಂದು ಬವಣಿಗೊಂಡೆ ಹೇಳು ನಾನು ನಿನ್ನಿದಿರು ಬಯಲಿನಲ್ಲಿ ಹೀಗೆ ಕೂಗಿಕೊಂಡೆ ॥ ೪೦ ಬಳ್ಳಿಯಲಿ ಆ ಬಳುಕು ಮೈಯ್ಯು, ಹುಲ್ಲೆಯಲಿ ಬೆದುರುಗಣ್ಣು ಮುಖದ ಛಾಯೆ ಚಂದ್ರನಲಿ, ಗರಿಗಳಲಿ ಹೆಳಲ ಭಾರವನ್ನು ನದಿಯ ಹರಿತದಲಿ ಹುಬ್ಬು ಮುರಿತವನು ಕಾಣಬೇಕು ಎಂದೆ ಇಷ್ಟು ಕೂಡ ಸಾದೃಶ್ಯ ಕಾಣದೆ, ಚಂಡಿ, ನೊಂದೆ, ಬೆಂದೆ ॥ ೪೧ ಅರೆಗಳಲ್ಲಿ ಕೆಂಗಾವಿಯಿಂದ ಹುಸಿ ಮುನಿಸಿನವಳ ಬರೆದು ನಿನ್ನ ಮೆಲ್ಲಡಿಗೆ ಕೆಡಹಿಕೊಳಲು ಬರುತಿರಲು, ಮುಂದುವರಿದು ॥ ಕಣ್ಣು ತುಂಬಿ ಕಂಗೆಡಿಸಿ ಕಂಬನಿಯ ಹಳ್ಳ ಹರಿದಿತಲ್ಲs ಚಿತ್ರದಲ್ಲಿ ಕೂಡುವದು ಕೂಡ ಆ ಇದಿಗೆ ಸೇರಲಿಲ್ಲs ॥ ೪೨ ಬಯಲಿನಲ್ಲಿ ತೋಳ್ದೆರೆದು ನಿನ್ನ ಬಿಗಿತಾಗಿ ಅಪ್ಪಿಕೊಂಡು ಸಿಕ್ಕೆ ನೀನು ಹೇಗಾರೆ ಎಂದೆ, ನಾ ಕನಸುಗಳಲಿ ಕಂಡು ॥ ಇದನ್ನು ನೋಡಿ ಮರುಮರುಗದಿರುವ ವನದೇವತೆಯರೆ ಅಲ್ಲಿ ಮುತ್ತಿನಂಥ ಕಂಬನಿಯ ಸುರಿಸಿದರು ಚಿಗುರು ಚಿಗುರಿನಲ್ಲಿ ॥ ೪೩ ನನೆಯು ಮುರಿದು, ಚಿಗುರೊಡೆದು, ಬಿರಿದಿರುವ ದೇವದಾರು ಮರವು ಅಂಟು ಸುರಿದ ನರುಗಂಪ ಕುಡಿದ ಕುಳಿಗಾಳಿಗೇನು ಭರವು ! ॥ ಸುಗುಣಿ ನಿನ್ನ ಮೈ ಮುಟ್ಟಿ ಬಂದಿತೋ ಎನೋ ಎಂದು ನಾನು ಆ ಹಿಮಾದ್ರಿವಾತವನೆ ಇಲ್ಲಿ ಉಬ್ಬುಬ್ಬಿ ತಬ್ಬುತಿಹೆನು ॥ ೪೪ ಮೂರು ಜಾವ ಉದ್ದಿದ್ದ ಇರುಳು ಕ್ಷಣದಂತೆ ಕಳೆಯಬಹುದೇ ಇಡಿಯ ಹಗಲು ಯಾವಾಗಲೂನು ದಿಗಿಲಾಗದಂತೆ ಇಹುದೇ ॥ ಇಂತು ಚಿತ್ತ ಕೈಗೂಡದಾಗ ಬಯಲಾಸೆಯಿಂದ ನೊಂದು ನಿನ್ನ ವಿರಹ ವ್ಯಥೆಯಿಂದ ಬೆಂದು,ಬದುಕಿಹೆನು ಹೇಗೊ ಇಂದು ॥ ೪೫ ಆದರೂನು ಹಿಡಿದಿರುವೆ ಜೀವ, ಏನೇನೊ ಲೆಕ್ಕ ಹಾಕಿ ಸುಭಗೆ ಅಂಜಿ ನೀ ಸಾಯಬೇಡ, ಕಳೆ ಕಾಲ ಹೇಗೊ ನೂಕಿ ॥ ಯಾರು ಬರಿಯ ಸುಖ, ಬರಿಯ ದು:ಖ ಪಟ್ಟವರು ಲೋಕದಲ್ಲಿ ? ದೆಸೆಯು ಕೆಳಗೆ ಮೇಲಾಗಿ ತಿರುಗುವದು ಏಕಚಕ್ರದಲ್ಲಿ ॥ ೪೬ ಹಾವು ಹಾಸಿಗೆಯ ಹರಿಯು, ತೊರೆವ ದಿನ, ಶಾಪ ಮುಗಿಯಲಹುದು ನಾಲ್ಕು ತಿಂಗಳನು ಕಣ್ಣು ಮುಚ್ಚಿ ನೀನಿನ್ನು ಕಳೆಯಬಹುದು ॥ ಬಳಿಕ ಬರುವೆ, ಇನ್ನುಳಿದ ಬಯಕೆಗಳು ಇರಲಿ ಏಕೆ ಚಿಂತೆ ? ಬೆಳೆವ ತಿಂಗಳಲ್ಲಿ ಇರುಳು ಇರುಳುಗಳ ಅದಕೆ ಕಳೆವೆವೆಂತೆ ॥ ೪೭ ಒಮ್ಮೆ ನಿನಗೆ ದಿನದಂತೆ ಕೊರಳ ತಳಕಿರಿಸಿ ನಿದ್ದೆಯಂತೆ ತೋಳದಿಂಬಿನಲಿ ಹೊರಳಿ, ನೀನಳುತ ಏಕೊ ಎದ್ದೆಯಂತೆ ॥ ಕೇಳಕೇಳುತಿರೆ ಏನು ಎಂದು ಒಳನಕ್ಕು ಅಂದೆಯಂತೆ :- "ಕಂಡೆ ಕನಸಿನಲಿ, ಕಳ್ಳ, ನೀನು ಯಾವಳನೊ ಕೂಡಿದಂತೆ" ॥ ೪೮ ಕುಶಲನಿರುವೆ ನಾನಿಲ್ಲಿ ನಿನ್ನನೇ ನೆನೆದು ಧೈರ್ಯತಾಳಿ ನೀನು ಕೂಡ ಎದೆಗೆಡಿಸಿಕೊಳ್ಳದಿರು ಏನೊ ಸುದ್ದಿ ಕೇಳಿ ॥ ಅಗಲಿದಾಗ ತಿನ್ನುವದು ಸ್ನೇಹವೆನ್ನುವರು ಜೀವವನ್ನು ಕೂಡಿದೊಡನೆ ಅದೆ ಸೂರೆ ಮಾಡುವದು ಪ್ರೇಮಭಾವವನ್ನು ॥ ೪೯ ಮೊದಲ ವಿರಹದಲಿ ಬೆಂದ ಸಖಿಗೆ ನೀ ಹೀಗೆ ಧೈರ್ಯ ಹೇಳಿ ಶಿವನ ಬಸವ ನಗೆದಿರುವ ನಗದ ತುದಿಯಿಂದ ಕಾಲ ಕೀಳಿ ॥ ಮರಳಿ ಬಂದು, ಅವಳೊಸಗೆ ತಂದು, ನನಗೊಂದು ಬಾಳ ನೀಡು ಕಳಚಿ ಬೀಳಲಿಹ ಕುಂದಕುಸುಮದೊಲು ಇಹುದು ನನ್ನ ಪಾಡು ॥ ೫೦ ಒಪ್ಪಿಕೊಂಡೆಯಾ, ಅಪ್ಪಾ, ಹೇಳು ಈ ಬಂಧುಕೃತ್ಯವನ್ನು ಇಲ್ಲವೆಂದು ನಾ ತಿಳಿಯೆ ನಿನ್ನ ಗಂಭೀರ ಮೌನವನ್ನು ॥ ನೀರ ನೀಡಿ ಚಾದಗೆಗೆ, ಸುಮ್ಮನಿಹೆ. ಬೇರೆ ಸಾಕ್ಷ್ಯ ಬೇಕೆ ತಮ್ಮ ಇಷ್ಟದವರಿಷ್ಟ ಮಾಡುವವ ಬಾಯಲಾಡಲೇಕೆ ? ॥ ೫೧ ಸಿಕ್ಕ ಹಾಗೆ ನಾ ಬೇಡಿಕೊಂಡೆ, ಮಾಡಿಷ್ಟು ನನ್ನದನ್ನು ಎನ್ನು ಗೆಳೆಯನಿವ, ಎನ್ನು ಅಗಲಿದವ, ಅಯ್ಯೋ ಪಾಪ, ಎನ್ನು ॥ ತಿಳಿದ ನಾಡು ತಿರುಗಾಡು ಮೇಘವೇ ! ಮಾಟ ಆಟವಾಡಿ ಬೇಡಿಕೊಂಬೆ ನಾ ಇರಲಿ ಎಂದಿಗೂ ಮೋಡ ಮಿಂಚುಗೂಡಿ ॥ ೫೨ ಕೃತಜ್ಞತೆ ನನ್ನ ಮನದ ಕಜ್ಜಳವ ಕಳೆದು ಹೊಸ ಬೆಳಕು ಹೊತ್ತಿ ಕುಡಿಗೆ ನಾನು ಹಿಗ್ಗಿದೆನು ನಿನ್ನ ಕೃತಿಯನಿಟ್ಟಂತೆ ನನ್ನ ಮುಡಿಗೆ ॥ 'ಹೋಗು ಸುಕವಿ-ರಸ-ದಾಸಿಯಾಗಿ ದುಡಿ" ಎಂದೆ ನನ್ನ ನುಡಿಗೆ ಮಾತಿನಲ್ಲೆ ಮೂಲೋಕ ಸೃಜಿಸುವಾ ನಿನ್ನ ಪ್ರತಿಭೆಯಡಿಗೆ ॥ ೧ ಹಿಂದಾಗಲಿಲ್ಲ. ಮುಂದಾಗಲಾರ, ಕವಿ ಕಾಳಿದಾಸ ನೀನು ! ಶೃಂಗಾರದಿಂದೆ ನವಭಕ್ತಿರಸವ ಹೊಮ್ಮಿಸುವ ದಿವ್ಯಭಾನು ! ರಸವತಿಯು ನಿನ್ನ ಸರಸತಿಯು, ಸವಿಗೆ ತುಟಿಮುದ್ದು ಹಾಲು ಜೇನು ! ಕನ್ನಡದೊಳಿಂದು ಕನ್ನಡಿಸಿದಂತೆ ಮೂಡಿರುವಳಿಲ್ಲಿ ತಾನು ! ಶಬ್ದಾರ್ಥ: ಕಿರುವಕ=ಕೆಂಪುಹೂವಿನ ದೊಡ್ಡ ಗೋರಂಟಿ. ನೀರು=ನೀರಿಗೆ ಮಡಿಕೆ, ನೀವಿಬಂಧ=ಸೀರೆಯನ್ನ ಉಡುವಾಗ ಹಾಕುವ ಗಂಟು, ಕಂಡಿ=ರಂಧ್ರ, ತಿಗುರು=ಸುಗಂಧ ದ್ರವ್ಯ, ಬಿದಿರಿ=ಹರಡಿ, ವಿಸ್ತರಿಸಿ ಮುರುಕ=ಮುಖವಿನ್ಯಾಸ, ತಿರುಪಾಟ=ಆವರ್ತ, ಕಾರಣೆ=ಬಣ್ಣದ ಗೆರೆ. ನನೆ=ಮೊನೆಹಲ್ಲು ಹರಿತವಾದಹಲ್ಲು ಕುಳಿರ್=ತಂಪು, ಪೊಗರು=ಹೊಳಪು, ಜಾಳಂದ್ರ=ಜಾವಂದ್ರ=ಬಲೆಯಂತೆ ರಂಧ್ರಗಳುಳ್ಳ ಕಿಟಕಿ ಸಮರು=ಅಂದಗೊಳಿಸು, ಮಲಕು=ತಿರುವು, ಸರಗಂಟು, ಜಲದ=ಮೋಡ, ಹಿಣಿಲ=ಜಡೆಯ ಹೆಣಿಕೆ ಕೂರ್ತು=ಕುಳಿತು, ಪ್ರೀತಿಯಿಂದ, ದಿಗಿಲ್=ಭಯ, ಅಂಜಿಕೆ, ವಿಸ್ಮಯ, ಸೂರೆಮಾಡು=ಲೂಟಿಮಾಡು ಅಂಬಿಕಾತನಯದತ್ತರ ಮೇಘದೂತದಿಂದ ಅಂದಿನ ಭಾರತ ಮೇಘದೂತ ಮಾಡಿದ ಪ್ರವಾಸದ ನಕ್ಷೆ ಹೀಗಿದೆ (ಡಾ॥ ಎಸ್. ಕೆ. ಜೋಷಿ ಸಿದ್ಧಪಡಿಸಿದ್ದು) ಊರುಗಳು (ತಾಣಗಳು) ಪಂಚವಟಿ (ರಾಮಗಿರಿ) ಉಜೈನಿ ವಿದಿಶಾ ದೇವಗಿರಿ ಕುರುಕ್ಷೇತ್ರ ಅಲಕಾಮರ ಮಾನಸ ಸರೋವರ. ನದಿಗಳು ರೇವತಿ ನಿರ್ವಿಂದ್ಯಾ ಗಂಗಾ ಗಂಭೀರಾ ಸರಸ್ವತಿ ನೇತ್ರಾವತಿ *ಕಾಳಿದಾಸ ನಾನೊಬ್ಬನುಂಟು ಹಲವಾಗಲೆಲ್ಲೂ ಎಂಬ ಹಂಬಲಿನ ಹಂಬೆ ಹರಿಬಳ್ಳಿವಳ್ಳಿಗಳಾಗಿ ತನ್ನ ದಾಂಗುಡಿಯ ಗೊನೆ ಬಾನು ಮಣ್ಣೊಂದಾಗಿ ಒಂದಾಗಿ ಕೆಲವಾಗಿ ಇರುವ ಹರುಹಿನ ತುಂಬ ನಲಿವುಲಿವು ಒಲುಮೆ ಸೆಲೆ ಚೆಲುವು ಹಂದಿರಗಂಬ- ವೆನೆ ತಾನೆ ಹೂ, ಹಕ್ಕಿ, ಹೆಣ್ಣು ಕಣ್ಣೆಂದಾಗಿ ನೀಡಿ ಬಾನ್‌ಮೀನಂಗಳಲ್ಲು ಚಳಮಿಳನಾಗಿ ಆಗ ಬಗೆಬಗೆ ಮಿಂಚಿತ್ತು ಒಂದೇ ಬಿಂಬ. ಕಣ್ವ ಕವಿಗಣ್ಣ ಕನ್ನಡಿಯಲ್ಲಿ ಒಳಮೂಡಿ ॥ ೧ ಆ ಕಾವ ನೋವೆ ಹಲವೊಲವಿನಲಿ ಹಾಡಾಗಿ ಯಾವುದೋ ಹಿರಿಬೆಳಕ ಮಿಸುಕಾಟವೇ ಹಿಗ್ಗಿ ಇಲ್ಲದುಂಟಾಗಿ ಕತ್ತಲೆಯು ಬೆಳಕಿಗೆ ಬಾಗಿ ಸಾವು ಸುಲಿಯಲು ಬಾಳೆ ತಿಳಲು ಎನೆ ಸವಿಗೂಡಿ ಮುದ್ದಾಟವೆನೆ ಬಂತು ಕಾಳಿದಾಸನ ನುಗ್ಗಿ . - ಮುಕ್ತಕಂಠ-೮/ಪ್ರ : ೧೯೫೬ ಭಾವ : ಕಾಳಿದಾಸನಲ್ಲಿ ಅವತರಿಸಿದ ಶಕ್ತಿಯನ್ನು ಕುರಿತು ಬರೆದದ್ದು. ಅರ್ಥ : ಹಂಬೆ-ಹಂಬು=ಬಳ್ಳಿ. ದಾಂಗುಡಿ=ಬಳ್ಳಿಯ ಬೆಳವಣಿಗೆಯ ಮುಂಭಾಗದ ತುದಿ. ಚಳಮಿಳ=ಚಂಚಲವಾಗಿ ಹೊಳೆ. ಮಿಸುಕಾಟ-ಚಲನೆ. ಕಾಳಿದಾಸನನ್ನು ಕುರಿತು ಡಾ॥ ದ. ರಾ. ಬೇಂದ್ರೆ